ಕೇಂದ್ರ ಸಚಿವ ಅನಂತ ಕುಮಾರ್ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ. ವಿಶ್ವ ಸಂಸ್ಥೆಯಲ್ಲಿಯೂ ಕನ್ನಡದ ಬಗ್ಗೆ ಮಾತನಾಡಿದ್ದರು. ಅನಂತಕುಮಾರ್ ಅವರಿಗೆ ಸೆಕ್ಯೂಲರ್ ಗೊತ್ತಿಲ್ಲ ಎನ್ನುತ್ತಿರುವ ಪ್ರೊ.ಚಂದ್ರಶೇಖರ್ ಪಾಟೀಲ ಕೂಡಲೆ ಕ್ಷಮೆಯಾಚಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವ ಅನಂತ್ ಕುಮಾರ್ ಅವರು ಬ್ಯಾಂಕ್ ಪರೀಕ್ಷೆಯನ್ನೂ ಕನ್ನಡದಲ್ಲೇ ನಡೆಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಗಣಕೀಕರಣ ಮಾಧ್ಯಮವಾಗಿ ಕನ್ನಡವನ್ನು ಬೆಳೆಸೋಣ ಎಂದು ಮೋದಿ ಜೊತೆ ಚರ್ಚೆ ನಡೆಸಿದ್ದಾರೆ. ನೆಲ ಜನದ ಪರವಾಗಿ ಕರ್ನಾಟಕದ ಪರವಾಗಿ ನಿಂತಿದ್ದು ಮೋದಿ ಸರ್ಕಾರವೇ.ಚಂಪಾ ಬಿಟ್ಟು ಬೇರೆಯವರು ಅಧ್ಯಕ್ಷರ ಸ್ಥಾನದಲ್ಲಿದ್ದರೆ ಅನಂತ ಕುಮಾರ್ ರವರ ಬೆನ್ನುತಟ್ಟುತ್ತಿದ್ದರು ಎಂದು ಕಿಡಿಕಾರಿದರು. ತಮ್ಮ ಭಾಷಣದಲ್ಲಿ ರಾಜಕೀಯ ಮಾತನಾಡುತ್ತೀರಾ ಚಂಪಾರವರೆ ನಮ್ಮ ಸೆಕ್ಯೂಲರ್ ಬಗ್ಗೆ ನಿಮಗೆ ಜ್ಞಾನ ವಿಲ್ಲ. ಜಗತ್ತಿನ ಎಲ್ಲಾ ಧರ್ಮಗಳು ಭಾರತದಲ್ಲಿ ನೆಲೆಸಿವೆ. ಭಾರತದ ಪರಂಪರೆ ನಿಮಗೆ ಗೊತ್ತಿಲ್ಲ. ಕನ್ನಡ ಭಾಷೆಯೊಳಗೆ ಎಲ್ಲವೂ ಇದೆ. ಭುವನೇಶ್ವರಿಗೆ ಪೂಜೆ ಹಾಗೂ ಪೇಟವನ್ನು ಧಿಕ್ಕರಿಸಿದ್ದೀರಿ. ಮೈಸೂರಿಗೆ ಯಾಕೆ ಬರಬೇಕಿತ್ತು ನೀವು, ಇಲ್ಲಿಗೆ ಬಂದು ನಮಗೆ ಪಾಠ ಹೇಳ್ತೀರಾ.